Article Body
ಕಡಬ: ಮಾಜಿ ಶಾಸಕ ಎಸ್.ಅಂಗಾರರ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮುಖಾಂತರ ಕುಂತೂರು ಗ್ರಾಮದ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗಾಗಿ ಹೂಳೆತ್ತಲು ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದರೂ ಅದರ ಟೆಂಡರ್ ಪಡೆಯಲು ಯಾರೂ ಮುಂದೆ ಬಾರದೆ ಕೆರೆ ಹೂಳೆತ್ತುವ ಅಭಿವೃದ್ಧಿ ಪಡಿಸುವ ಮಾತು ದೂರವೇ ಉಳಿದಿತ್ತು.
ಇದೀಗ ಮತ್ತೊಮ್ಮೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅವಧಿಯಲ್ಲಿ ಕಡಬ ತಾಲೂಕಿನ ಪುರಾತನ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗೆ 1.25 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇನ್ನಾದರೂ ಕೆರೆ ಅಭಿವೃದ್ಧಿಗೆ ಚಾಲನೆ ದೊರೆಯಬಹುದೆಂಬ ವಿಶ್ವಾಸ ಇಲ್ಲಿನ ಗ್ರಾಮಸ್ಥರದ್ದಾಗಿದೆ.
ಕಾಮಗಾರಿಯ ವೆಚ್ಚವು ಯಾವುದೇ ಕಾರಣಕ್ಕೂ ಅನುಮೋದಿಸಿದ ಮೊತ್ತಕ್ಕಿಂತ ಹೆಚ್ಚಾಗಬಾರದು ಹಾಗೂ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸತಳಿಸಬೇಕು. ಒಂದು ವೇಳೆ ಸ್ಥಳ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಳ ನಿರೀಕ್ಷಿಸಿದಲ್ಲಿ ವಿನ್ಯಾಸ ಬದಲಾವಣೆಯಿಂದಾಗಿ ಅಥವಾ ಬೇರೆ ಕಾರಣದಿಂದ ಅನುಮೋದಿಸಿದ ಅಂದಾಜು ಮೊತ್ತ ಹೆಚ್ಚಾಗುವ ಸಂಭವ ಇದ್ದಲ್ಲಿ, ತಕ್ಷಣ ಪರಿಷ್ಕೃತ ಅಂದಾಜಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ನಂತರ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಮತ್ತು ಅಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ವೀನಾ ವೈ ಎನ್ ಆದೇಶ ಹೊರಡಿಸಿದ್ದಾರೆ.
ಹಿಂದೆ 15 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದ ಈ ಕೆರೆ ಈಗ ಹತ್ತು ಎಕರೆಗೆ ಇಳಿದಿದೆ. ಈಗ ಕೆರೆಯ ತಳ ಭಾಗ ಎದ್ದು ಕಾಣುತ್ತಿದೆ. ಇದರಲ್ಲಿದ್ದ ನೂರಾರು ಜಾತಿಯ ಮೀನುಗಳು ಕೆರೆಯ ಬದಿಯಲ್ಲಿರುವ ಮರಗಳಲ್ಲಿ ದೂರದ ಊರುಗಳಿಂದ ಬಂದು ನೆಲೆ ನಿಂತಿರುವ ಸಾವಿರಾರು ಬಕ ಪಕ್ಷಿಗಳ ಆಹಾರವಾಗಿತ್ತು.
ಕುಂತೂರು ಗ್ರಾಮದ ರೈತರ ಕೃಷಿ ಬದುಕಿನ ನೀರು ಯಾವ ಬರಗಾಲದಲ್ಲೂ ಇಲ್ಲಿ ನೀರು ಆರಿಲ್ಲ. ಹತ್ತಕ್ಕೂ ಹೆಚ್ಚು ಪಂಪ್ಸೆಟ್ಗಳು ನೀರೆತ್ತಿದರೂ ಕೆರೆ ಬತ್ತುತ್ತಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪರಿಯ ಸನ್ನಿವೇಶ ನಿರ್ಮಾಣವಾಗಿದ್ದರೂ ಕೆರೆ ಬರಿದಾದ ಉದಾಹರಣೆಗಳು ಇಲ್ಲ ಆದರೆ ಕಳೆದ ವರ್ಷ ಮಾತ್ರ ಕೆರೆ ಬರಿದಾಗಿದ್ದು, ಕೆರೆಯ ಮಧ್ಯೆ ಹೂಳು ತುಂಬಿದ ಕೆಸರು ನೀರು ಸ್ವಸಲ್ಪ ಮಟ್ಟಿಗೆ ಕಾಣಿಸಿಕೊಂಡಿತ್ತು.ನೀರಿನ ಮೂಲಬರಿದಾಗುತ್ತಿದ್ದಂತೆ ಕೆರೆಯ ನೀರನ್ನು ಬಳಸುತ್ತಿದ್ದ ಹತ್ತಕ್ಕೂ ಹೆಚ್ಚು ರೈತರು ಪ್ರತಿಯೊಬ್ಬರೂ ಕೊಳವೆ ಬಾವಿ ಕೊರೆಸಿದರೂ ಅದು ಸಫಲವಾಗಲಿಲ್ಲ. ಒಂದರೆಡು ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಬರುತ್ತಿದ್ದರೆ ಇನ್ನುಳಿದವುಗಳೆಲ್ಲಾ ವಿಫಲವಾಗಿತ್ತು.
ಈ ವರ್ಷ ವರ್ಷ ಜನವರಿಯಿಂದಲೇ ಆಗಾಗ ಮಳೆಯಾಗುತ್ತಿದುದ್ದರಿಂದ ಕೆರೆಯಲ್ಲಿ ನೀರಿದೆ. ಕೆರೆಯನ್ನು ಹೂಳೆತ್ತದೆ ಇರುವುದೂ ಕೂಡಾ ಕೆರೆ ನೀರು ಇಲ್ಲದಂತಾಗಲು ಕಾರಣವಾಗಿದೆ.